Sunday, 14 January 2018

ಹಣದ ಸುಂದರಿ

ಹಣದ ಸುಂದರಿ 
===========
ಇವಳ್ಯಾರೋ  ಸುಂದರಿ 
ಹಣದಲ್ಲೇ ನನ್ನ ಖರೀದಿಸುವ ಹಂಬಲ 
ಋಣದಲ್ಲೇ ದಾಸನಂತೆ ಬದುಕೆನ್ನುವ ಚಪಲ.

ಬೇಕಾದಾಗ ಕರೆಯುವಳು ಅಂಬಾರಿ ಕೊಟ್ಟು,
ಭವ್ಯ ಬಂಗಲೆಯಲ್ಲಿ ಬರಡು ಬದುಕು.

ಕುರುಡು ಕಾಂಚಾಣಿ ಇವಳು,
ಹಮ್ಮು ಬಿಮ್ಮಿನ ಹೆಮ್ಮಾರಿ,
ದುಡ್ಡಿನ ದುರಹಂಕಾರಿ.

ಹಗಲೆನ್ನಲಿಲ್ಲ, ರಾತ್ರಿಯ ಪರಿವೆ ಇರಲಿಲ್ಲ.
ದುಡಿದು ಬೆಂಡಾಗಿತ್ತು ಮೊಂಡಾಗಿತ್ತು ಬೆನ್ನು ಮೂಳೆ.
ತನ್ನ ಸುಖಕ್ಕೆ ನನ್ನ ಬಲಿ ಕೊಟ್ಟಳಿ  ಸುಂದರಿ.  

ಹೋರಾಟದ ಬದುಕಲ್ಲಿ ಹೊಟ್ಟೆಕಿಚ್ಚೆ ಆಹಾರ ಇವಳಿಗೆ.
ಮುಗ್ಧತೆಯ ಮುಖವಾಡ ಹೊತ್ತ ಮಾರಿ ಹೆಣ್ಣಿವಳು.

ನನ್ನ ಗೆದ್ದೆನೆನ್ನುವ ಹಮ್ಮು ಬಿಮ್ಮಿನ ಹೆಮ್ಮಾರಿ,
ಸೋತು ಸುಣ್ಣವಾದರೂ ಬಣ್ಣ ನೀಡುವ ಹಮ್ಮಿರ ನಾನು.

ತನ್ನತನವನ್ನು ಮೂರು ಕಾಸಿಗೆ ಹರಾಜು ಹಾಕಿ,
ಸವಾರಿ ಮಾಡುವ ವಿಷ ಸರ್ಪವೆ,
ಮೂರು ದಿನದ ಸಂತಿ ಇದು,
ಬದುಕಲು ಬಿತ್ತಿ, ಬದುಕು ಕಟ್ಟಿಕೊ,

ಎಲೆ ಮನು ಕುಲದ ಮೃಗವೆ,
ಹೆಣವಾಗಲು ಹಣವೇನು ಹೊತ್ತುಕೊಂಡು ಹೋಗುವೆಯಾ?.....

Friday, 12 January 2018

ನಿನ್ನವ್ವನಾಗೆ ಹುಟ್ಟಬೇಕು,...


ನಿನ್ನವ್ವನಾಗೆ ಹುಟ್ಟಬೇಕು,

ಮುಂದಿನ ಜನ್ಮವೊಂದಿದ್ದರೆ

====================

ಹುಟ್ಟಿ ಬಂದೆ ನಾ ಈ ಭೂಮಿಗೆ 

ಅರಿವಿಲ್ಲದ ಮಾಂಸದ ಮುದ್ದೆಯಾಗಿ.

ನನ್ನ ಆ ಮೊದಲ ಕಿರುಚಾಟ 

ನನ್ನವ್ವನ ರೋಮಾಂಚನಗೊಳಿಸಿತ್ತು 

ಅದೆಷ್ಟೋ ಕನಸುಗಳನ್ನು ಹೆಣೆದು 

ಒಂಬತ್ತು ತಿಂಗಳು ಒಡಲಲ್ಲಿ 

ಹೊತ್ತು ಜೋಪಾನ ಮಾಡಿದಳು 

ನನ್ನ ಆಗಮನ ಅವಳ ಬಾಳಲ್ಲಿ 

ನೂರಾರು ಆಸೆಗಳನ್ನು ಮೊಳಕೆಯೊಡೆಸಿತ್ತು 

ಅನುದಿನವು ಅಲೆಮಾರಿಯಂತೆ ದುಡಿದು 

ನನ್ನ ಬೇಕು ಬೇಡಗಳಿಗೆ ಹೋರಾಡುತ್ತಿದ್ದಳು ನನ್ನವ್ವ 

ಅವ್ವಾ... ಯಾರವ್ವ ಕೊಟ್ಟರು ನಿಂಗಷ್ಟು

ಸ್ಪೂರ್ತಿ, ಸಹನೆ, ತಾಳ್ಮೆ...??

ನಾನೆಷ್ಟು ಪುಣ್ಯವಂತನೋ ಆ ದೇವರೇ ಬಲ್ಲ

ನಿನ್ನಂಥ ಅವ್ವ ಯಾವ ಕೋಟಿಗೂ ಲೆಕ್ಕಕ್ಕಿಲ್ಲ 

ನೀನೊಂದು ಅದ್ಭುತ.... ಅತಿ ಅದ್ಭುತ....

ನಿನ್ನ ಋಣಾನುಬಂಧಕ್ಕೆ ಬೆಲೆಯಿಲ್ಲ ನನ್ನವ್ವ.

ಅದು ತಿರಲು ನಿನ್ನವ್ವನಾಗೆ ಹುಟ್ಟಬೇಕು ,

ಮುಂದಿನ ಜನ್ಮವೊಂದಿದ್ದರೆ.......

ಹರಸವ್ವ ನಿನ್ನ ಮಗನನ್ನ 

ನೀ ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಲು...

ಸಂಜೆ ಎಂಬ ಸುಂದರ ಘಳಿಗೆ


ಸಂಜೆ ಎಂಬ ಸುಂದರ ಘಳಿಗೆ 

====================

"ಈ ಸಂಜೆ ಯಾಕಾಗಿದೆ ನೀನಿಲ್ಲದೆ, ಈ ಸಂಜೆ ಸಾಕಾಗಿದೆ " ಯಾರ್ರಿ ಬರೆದದ್ದು ಈ ಹಾಡು? ಸಜೆ ಅನ್ನೋ ಎರಡು ಅಕ್ಷರಗಳ ನಡುವೆ ಒಂದು ಸೊನ್ನೆ ಸೇರಿದರೆ ಆಗುವದೇ ಸುಂದರ ಸಂಜೆ. ಈ ಸಂಜೆಯನ್ನು ಯಾರ್ರೀ ಇಷ್ಟ ಪಡೋಲ್ಲ? ಪ್ರೇಮಿಗಳಿಗೆ ಸಂಜೆಯಂತೂ ಸ್ವರ್ಗವೇ ಸರಿ. ಪಾಪ, ಆ ಪ್ರೇಮಿ ವಿರಹ ವೇದನೆಯಲ್ಲಿದ್ದಾನೆ ಬಿಡಿ ಅಂತೀರಾ? ಹೋಗ್ಲಿ ಬಿಡಿ....

      ವಾರದಲ್ಲಿ ಸಂಡೆ ಎಷ್ಟು ಮುಖ್ಯವೋ, ದಿನದಲ್ಲಿ ಸಂಜೆ ಅಂದ್ರೆ ಇವಿನಿಂಗ್ ಅಂತಾರಲ್ಲ ಅದು  ಅಷ್ಟೇ ಮುಖ್ಯ. ವಾರದ ಎಲ್ಲ ಒತ್ತಡಗಳನ್ನು ಮರೆತು ದಿನಪೂರ್ತಿ ಹ್ಯಾಪಿ ಆಗಿರಲು ಸಂಡೆ ಒಂದು ಅತ್ಯಂತ ಸುಖಮಯ ದಿನ. ಅದ್ಯಾವ ಪುಣ್ಯಾತ್ಮ ಇದನ್ನು ಜಾರಿಗೆ ತಂದನೋ ಅವನಿಗೆ ಕೋಟಿ ನಮನ. ಕೆಲಸ ಮಾಡುವ 90% ಜನ ವಾರದಲ್ಲಿ 2 ಸಂಡೆಗಳ್ಯಾಕೆ ಇರಬಾರದು , ಮಂಡೇ ಯಾಕೆ ಬರುತ್ತೆ  ಅಂತ ಗೊಣಗುತ್ತಾರೆ. ಹಾಗೆ ದಿನದ 24 ಗಂಟೆಗಳಿದೆಯಲ್ಲ ಅದ್ರಲ್ಲಿ 5PM to 8PM ಬಹಳಾನೇ ಇಂಪಾರ್ಟೆಂಟ್. ಗಂಡ, ಹೆಂಡತಿ ಮಕ್ಕಳನ್ನು ಕರ್ಕೊಂಡು ವಾಕಿಂಗ್ ಹೋಗುವದು ಒಂದು ಗುಂಪಾದ್ರೆ, ಇಳಿಗಾಲದಲ್ಲಿ ತನ್ನ ಹೆಂಡತಿಯೊಂದಿಗೆ ವಾಕಿಂಗ್ ಹೋಗುವ ಮುದುಕರ ಗುಂಪೊಂದಿರುತ್ತದೆ. ಎಲ್ಲ ಸೊಸೆಯರ ಗೋಳು ಹೇಳಿಕೊಂಡು ಬೈಯ್ಯುವ ಅತ್ತೆಯರ ಗುಂಪು ಮೂಲೆಯಲ್ಲಿ ಇರುತ್ತದೆ . ಅದ್ಯಾವುದೋ ಬೆಟ್ಟದ ತುದಿಯಲ್ಲಿ ಅಥವಾ ಗಾರ್ಡನ್ ನ ಕೊನೆಯಲ್ಲಿ ಪ್ರೇಮಿಗಳು ತಮ್ಮದೇ ಆದ ಲೋಕದಲ್ಲಿ ಇರುತ್ತಾರೆ. ಮಕ್ಕಳು ಆಟದಲ್ಲಿ ಮಗ್ನರಾದರೆ,  ಪಡ್ಡೆ ಹುಡುಗರಿಗೆ ಇದು "Peak Period of the Day" 

     ಆಹಾ! ಹೀಗೆ ನೆನೆಸುತ್ತ ಹೋದರೆ ಲೆಕ್ಕಕ್ಕೆ ಸಿಗದಷ್ಟು. ಸೂರ್ಯ ಮಧ್ಯಾಹ್ನವೆಲ್ಲ ಬಿಸಿಯಾಗಿ, ತಂಪಾಗಲು ತಾಯಿ ಮಡಿಲು ಸೇರುವ ಸಮಯ, ತಂಗಾಳಿ ಮೈ ಸೋಕುವ ಸಮಯ, ಹಕ್ಕಿಗಳು ಗೂಡು ಸೇರುವ ಸಮಯ, ಕೆಲಸಗಾರರು, ರೈತರು ಮನೆ ಸೇರುವ ಈ ಅದ್ಭುತ ಸಮಯವೇ ಸಂಜೆ. ಹಾಸ್ಟೆಲ್ನ ಮೆಟ್ಟಿಲುಗಳ ಮೇಲೆ ಕೂತು , ಕೈಯಲ್ಲಿ ಕಾಫಿ ಕಪ್ ಹಿಡ್ಕೊಂಡು, ಸೈಲೆಂಟಾಗಿರೋ ಹಾಡು ಹಾಕಿ, earphone ಕಿವಿಗೆ ತುರುಕಿಕೊಂಡರೆ ಸಾಕು. ಮಿಕ್ಕ ಜಗತ್ತು ಅಗೋಚರ. ಯಾವದೋ ಲೋಕದಲ್ಲಿ ವಿಹರಿಸುತ್ತ ಸಾಗುತ್ತೇವೆ. ತಂಗಾಳಿಗೆ ಮೈ ಸೋಕಿಸಿ ನರ್ತಿಸುವ ಒಂದೊಂದು ಎಲೆಯು ಸಹ ಅತ್ಯಂತ ಸುಂದರವಾಗಿ ಕಾಣುತ್ತದೆ ಸಂಜೆ ಹೊತ್ತಲ್ಲಿ. ದಿನದ ಕಷ್ಟ , ಒತ್ತಡ ಮರೆಯಲಿಕ್ಕೆ ಇರುವ , ಸುಖ ಮೆಲುಕು ಹಾಕಲು ಇರುವ ಏಕೈಕ  ಘಳಿಗೆ. ನಿಮ್ಮ ಏಕಾಂತವನ್ನು ಅನುಭವಿಸುವ ಆನಂದಮಯ ಸಮಯ. ನಾನಂತು ಒಂದು ದಿನಾನೂ ಮಿಸ್ ಮಾಡ್ಕೊಳ್ಳಲ್ಲ. ಒಂದ್ ದಿನ ಕುಂತ್ ನೋಡಿ, ನಾಳೆಯಿಂದ ಹೇಳದೆ ಕೂಡ್ತಿರಾ. I Promise. ಮಿಸ್ ಮಾಡ್ಕೊಳ್ಳಲ್ಲ ತಾನೇ? ಅನುಭವಿಸಿ ನೋಡಿ, ಅದರ ಮಜಾನೇ ಬೇರೆ. 

Friday, 24 March 2017

ಬರಿಗೈ ಫಕೀರ

     ನನಗೆ ಮೊದಲಿನಿಂದ ತಿರುಗುವ ಹುಚ್ಚು. ಆದ್ರೆ ತಿರುಗಾಡುವ ಚಟಕ್ಕೆ ಉತ್ಸಾಹ ಬಂದಿದ್ದು ನಾನು ಬೆಂಗಳೂರಿಗೆ ಬಂದಾಗ. ಕೈ ತುಂಬಾ ಸಂಬಳ, ವಾರಕ್ಕೆ ಎರಡು ದಿನ ರಜೆ. ಮತ್ತೇ ಇನ್ನೇನ್ ಬೇಕು ತಿರುಗೊಕೇ ಅಲ್ವಾ? ಆ ರಜೆ ಸಿಗುವ ಎರಡು ದಿನಗಳು ರೂಮಲ್ಲಿ ಇದ್ದದ್ದೇ ಅಪರೂಪ. ವಾರಪೂರ್ತೀ ಕಷ್ಟ ಪಟ್ಟು ದುಡಿದವನಿಗೆ ಎರಡು ದಿನ ಸಂಪೂರ್ಣವಾಗಿ ನನಗೋಸ್ಕರ ಮೀಸಲು. ಮೊದಲೇ ನಾನು software ಕೂಲಿ. ಕೆಲಸದ ಒತ್ತಡ, ಬಕೆಟ್ ಹಿಡಿಯುವರ ಕಾಟ, ತಲುಪದ ಗುರಿಗಳು, ಹೆಸರಿಗೆ  ಅಸ್ಟೆ ಸಿಗುವ ಹೈಕ್ಗಳು, ಮರೀಚಿಕೆ ಹಾಗಿರುವ on-site ಅವಕಾಶಗಳು ಹೀಗೆ ಇದೆಲ್ಲಾ IT ಯಲ್ಲಿ ಮಾಮೂಲು. ಎಲ್ಲಕ್ಕಿಂತ ಮುಖ್ಯವಾಗಿ managerಗಳ ಕಾಟ ತಡಿಯೊಕೇ ಆಗಲ್ಲ. IT ಯಲ್ಲಿ ಒಂದು ಅಲಿಖಿತ ಗಾದೆ ಇದೇ "ಜನ ಕಂಪೆನಿ ಬಿಡಲ್ಲ, manager ಬಿಡ್ತಾರೆ" ಅಂತ. ಅದಕ್ಕೆ ಬೆಂಗಳೂರ ಮಂದಿ ವಾರಾಂತ್ಯಕ್ಕೆ ಬೆಂಗಳೂರು ಬಿಟ್ಟು ಓಡುತ್ತಾರೆ. ನಾನು ಎಲ್ಲರೊಳಗೆ ಒಬ್ಬನಾಗಿದ್ದೆ.
     ಇನ್ನು ಟ್ರಿಪ್ ಒಬ್ಬನೇ ಹೋಗೋಕೆ ಕಷ್ಟ. ಆದ್ರೆ ಯಾರು ಸಿಗದಿದ್ರೇ ಎನ್ ಮಾಡೋಕೆ ಆಗುತ್ತೆ, ನಾನ್ ಮಾತ್ರ ಪ್ಲಾನ್ ಮಾಡಿದ್ದು ಮಿಸ್ ಮಾಡಲ್ಲ. ಹೀಗೆ ಏಕಾಂಗಿ ಪಯಣಗಳು ಬಹಳ ಅಯಿತು. ನಾನು ಹೀಗೆ ಒಬ್ಬೊನೇ ಹೊರಟರೆ, ಫ್ರೆಂಡ್ಸ್ಗಳು ನಕ್ಕಿದ್ದು ಬಹಳ. ನಗೊರು ನಗ್ಲೀ, ಅಂತ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಸಿಕ್ಕ ಬಸ್ ಹತ್ತೀ ಹೊರಟಿ ಬಿಡುತ್ತೇನೆ. ಥೇಟ್ ಬರಿಗೈ ಫಕೀರನ ತರ. ಇನ್ನು ನನಗೆ ಅತ್ಯಂತ ಇಷ್ಟ ಆಗೋ ಜಾಗಗಳಲ್ಲಿ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯ. ದೇವಸ್ಥಾನಕ್ಕೆ ಬಂದರೆ ಸಾಕು ಮನಸ್ಸು ಶಾಂತವಾಗುತ್ತದೆ. ಹೊರಡಲು ಮನಸ್ಸೇ ಬರಲ್ಲ. ಆದ್ರೆ, ಬೆಂಗಳೂರು ನಂಗೆ "ಬಿಟ್ಟೇನೇಂದರು ಬಿಡದಿ ಮಾಯೆ". ಅನಿವಾರ್ಯ, ಹೋಗಲೇ ಬೇಕು. ದೇವರ ಆಶಿರ್ವಾದ ತುಂಬಾ ಮುಖ್ಯ ಜೀವನದಲ್ಲಿ. ನಂಬಿದವರ ಯಾವತ್ತು ಕೈ ಬಿಡಲ್ಲ ದೇವರು. ಇದನ್ನೆಲ್ಲ ಬರೆಯುವ ಹೊತ್ತಿಗೆ, ಬೆಂಗಳೂರು ಕಡೆಗ ಹೊರಡುವ, ಸಂಜೆ ಬಸ್ ಟೈಂ ಅಯಿತು ಅಂತ ಹಾರ್ನ್ ಮಾಡುತ್ತಿತ್ತು. ಬಂದೆ ಬೆಂಗಳೂರು.

ಮಂಕುತಿಮ್ಮನ ಕಗ್ಗ..

ಕಳೆದ ಒಂದು ವರ್ಷದಿಂದ ಮನಸಿಗೆ ಖುಷಿ ಕೊಡುವ ಎಲ್ಲಾ ಕೆಲಸಗಳು ಮಾಡಲಿಕ್ಕೆ ಸಮಯ ಸಿಗ್ತಾ ಇದೆ. ಸಮಯ ಹೊಂದಿಸಿಕೊಳ್ಳುತ್ತಿದ್ದೇನೆ ಅಂದರೂ ಸರಿಯೇ. ಮುಖ್ಯವಾಗಿ ನಾನು ಕನ್ನಡ ...