ಇದಕ್ಕೆಲ್ಲ ನನಗೆ ಸ್ಫೂರ್ತಿ ನೀಡೋದು ಮಂಕುತಿಮ್ಮನ ಕಗ್ಗ.
"ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು ।
ದೊರೆತುದು ಹಸಾದವೆಂದುಣ್ಣು ಗೊಣಗಿಡದೆ ।।
ಧರಿಸು ಲೋಕದ ಭಾರವ ಪರಮಾರ್ಥವನು ಬಿಡದೆ ।
ಹೊರಡು ಕರೆ ಬರಲ್ ಅಳದೆ – ಮಂಕುತಿಮ್ಮ"
ನಾನು ಮಾಡುವ ಕೆಲಸ ಯಾವತ್ತೂ ಸಣ್ಣದು ಅನಿಸಲೇ ಇಲ್ಲ. ದೊಡ್ಡ ಹುದ್ದೆಗೆ ಹೋಗಬೇಕು ಅನ್ನೋ ಆಸೆ ಇದೆ, ಆದ್ರೆ ಕೊರಗಿಲ್ಲ. ಮನುಷ್ಯನ ಆಸೆಗೆ ಮಿತಿ ಎಲ್ಲಿದೆ. ಜೀವನದಲ್ಲಿ ನಮಗಿಂತ ಮೇಲೆ ಇರುವವರನ್ನು ನೋಡಿ ಕೊರಗುವದಕಿಂತ, ಇರುವ ಕೆಲಸ ಗೊಣಗಿಡದೆ ಮಾಡಿಕೊಂಡು ಹೋಗುತ್ತೇನೆ. ಇನ್ನು ಕೊನೆಯ ಸಾಲು, ಕರೆ ಬಂದಾಗ ಅಳದೆ ಹೊರಡಬೇಕು ಅಂದರೆ ಬದುಕಿದ್ದಾಗ ಕೊರಗದೆ, ಸುಂದರ ಜೀವನ ಸವೆಸಿ ಹೊರಡಬೇಕು ಅಳದೆ ಅಂತ ನೇ ನಾನು ಅರ್ಥ ಮಾಡಿಕೊಂಡಿದ್ದೇನೆ.
ಹಲವು ಸಲ ಪ್ರವಾಸ ಹೋರಾಡಲು ನನಗೆ ಸ್ನೇಹಿತರು ಸಿಗಲ್ಲ. ಕೆಲವು ಪ್ರವಾಸಗಳು ಒಂಟಿಯಾಗಿಯೇ ಮಜವಾಗಿರುತ್ತವೆ. ಒಂಟಿ ಜೀವನ ನನಗಂತೂ ಬೇಸರ ಮೂಡಿಸಿಲ್ಲ. ಮೊದಲು ಸ್ನೇಹಿತರ ಜೊತೆ ಬಾಡಿಗೆ ಮನೆ ಹಂಚಿಕೊಂಡು, ಹಾಸ್ಟೆಲ್ ಅಲ್ಲಿ ಸ್ನೇಹಿತರ ಜೊತೆ ರೂಮ್ ಶೇರ್ ಮಾಡಿಕೊಂಡು ಬಂದವನಿಗೆ ಈ ಒಂಟಿ ಜೀವನ ಕಷ್ಟ ಅಂತ ಯಾವತ್ತೂ ಅನ್ಸಿಲ್ಲ. ಇದೊಂಥರಾ ಚೆನ್ನಾಗಿದೆ, ಹೊಸ ಅನುಭವ ಸಹ. ಅದಕ್ಕೆ ಮೂಲ ಕಾರಣ ಕಗ್ಗವೆ
"ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ ।
ಧರ್ಮಸಂಕಟಗಳಲಿ, ಜೀವಸಮರದಲಿ ।।
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ ।
ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ ।।"
ಕಷ್ಟ, ಸುಖ, ಧರ್ಮಸಂಕಟ, ನಿರ್ವಾಣ, ನಿರ್ಯಾಣ ಏನೇ ಇರಲಿ ನಾವು ನಿಲ್ಲೋದು ಒಬ್ಬರೇ. ಹಾಗಾಗಿ ಒಬ್ಬರೇ ಇರುವದನ್ನು ಕಲಿಯಬೇಕು ಮತ್ತು ಆ ಒಂಟಿತನ ಖುಷಿಯಿಂದಲೇ ಅನುಭವಿಸಬೇಕು .
ಈ ಜೀವನಕ್ಕೆ ಈ ಎರಡು ಕಗ್ಗಗಳು ಸಾಕು ಅನ್ನಿಸುವಷ್ಟರ ಮಟ್ಟಿಗೆ ಇಷ್ಟ ಆಗಿವೆ. ಮಂಕುತಿಮ್ಮನ ಕಗ್ಗ ಎರಡನೇ ಭಗವದ್ಗೀತೆ ಅಂದರೆ ತಪ್ಪಾಗದು.